College Code: P15GAP0063 | AISHE CODE: C58209

೨೦೪೭ ರಲ್ಲಿ ೧೦೦ ಜನ ಯುವ ರಾಜಕೀಯ ನಾಯಕರಿರಬೇಕು-ಅವರು ಎನ್.ಎಸ್.ಎಸ್.ನಿಂದ ರೂಪುಗೊಳ್ಳಬೇಕು

೨೦೪೭ ರಲ್ಲಿ ೧೦೦ ಜನ ಯುವ ರಾಜಕೀಯ ನಾಯಕರಿರಬೇಕು-ಅವರು ಎನ್.ಎಸ್.ಎಸ್.ನಿಂದ ರೂಪುಗೊಳ್ಳಬೇಕು
26 Feb 2026
Admin
144 Reads


“ ೨೦೪೭ ರಲ್ಲಿ ೧೦೦ ಜನ ಯುವ ರಾಜಕೀಯ ನಾಯಕರಿರಬೇಕು-ಅವರು ಎನ್.ಎಸ್.ಎಸ್.ನಿಂದ ರೂಪುಗೊಳ್ಳಬೇಕು          – ಡಾ. ಶುಭಾ ಮರವಂತೆ

ಮಾನಸ ಟ್ರಸ್ಟ್, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಘಟಕ ೧ & ೨, IQAC, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ: ೭-೧೧-೨೦೨೫ ರಂದು ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ‘ರಾಷ್ಟ್ರೀಯ ಸೇವಾ ಯೋಜನೆ ಮತ್ತು ನಾಯಕತ್ವ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಮತ್ತು ಅಭಿನಂದನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಮಾನಸ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ನಿರ್ದೇಶಕರು ಹಾಗೂ ಕಟೀಲ್ ಅಶೋಕ್ ಪೈ ಸ್ಮಾರಕ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕರಾದ ಡಾ|| ರಾಜೇಂದ್ರ ಚೆನ್ನಿ ಅವರ ಗೌರವ ಉಪಸ್ಥಿತಿಯಲ್ಲಿ ಡಾ. ಶುಭಾ ಮರವಂತೆ, ಸಂಯೋಜನಾಧಿಕಾರಿಗಳು, ರಾಷ್ಟ್ರೀಯ ಸೇವಾ ಯೋಜನೆ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ ಇವರು ಉದ್ಘಾಟಿಸಿದರು. ಅವರು ‘ಎನ್.ಎಸ್.ಎಸ್. ಮತ್ತು ನಾಯಕತ್ವ ಬೆಳವಣಿಗೆ’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿದರು. ಇದೇ ಸಂದರ್ಭದಲ್ಲಿ ೨೦೨೩-೨೪ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ಉತ್ತಮ ಕಾರ್ಯಕ್ರಮಾಧಿಕಾರಿ ರಾಜ್ಯ ಪ್ರಶಸ್ತಿ ಮತ್ತು ೨೦೨೫ ನೇ ಸಾಲಿನ ಕರ್ನಾಟಕದ ಗಾಂಧಿ ಭವನದ ಪ್ರೊ.ಜಿ.ಬಿ.ಶಿವರಾಜು ರಾಷ್ಟ್ರೀಯ ಸೇವಾ ಯೋಜನೆ ಉತ್ತಮ ಅಧಿಕಾರಿ, ಗಾಂಧಿ ಸೇವಾ ರಾಜ್ಯ ಪ್ರಶಸ್ತಿ ವಿಜೇತರಾದ ಡಾ. ಶುಭ ಮರವಂತೆಯವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಡಾ. ಸುಕೀರ್ತಿಯವರು ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ ಮತ್ತು ರೂಪರೇಷೆಗಳ ಕುರಿತು ಮಾಹಿತಿಯನ್ನು ನೀಡಿದರು. ಮಾನಸ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ನಿರ್ದೇಶಕರು ಹಾಗೂ ಕಟೀಲ್ ಅಶೋಕ್ ಪೈ ಸ್ಮಾರಕ ಸಂಸ್ಥೆಗಳ ಶೈಕ್ಷಣಿಕ ಸಲಹೆಗಾರರಾದ ಡಾ|| ರಾಜೇಂದ್ರ ಚೆನ್ನಿ ಅವರು ಮಾತನಾಡಿ ಡಾ. ಶುಭ ಮರವಂತೆರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅವರ ಸೇವಾ ಅವಧಿಯಲ್ಲಿ ಹಲವು ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುವುದಲ್ಲದೆ ಅವರಿಗೆ ಆಶ್ರಯವನ್ನು ನೀಡಿ ವಿದ್ಯಾರ್ಥಿಗಳ ಸರ್ವತೋಮುಖವಾದ ಅಭಿವೃದ್ಧಿಗೆ ಸಹಕರಿಸಿದ್ದಾರೆ. ಅವರು ಪ್ರಥಮ ಮಹಿಳಾ ಎನ್.ಎಸ್.ಎಸ್. ರಾಜ್ಯದ ಸಂಯೋಜನಾಧಿಕಾರಿಯಾಗಿ ಅತ್ಯಂತ ಯಶಸ್ವಿಯಾಗಿ ಮುನ್ನೆಡೆಸುತ್ತಿದ್ದಾರೆ ಎಂಬುದು ಶ್ಲಾಘನೀಯ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು. 

ವಿದ್ಯಾರ್ಥಿಗಳಲ್ಲಿ ನಾಯಕತ್ವದ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದ ಡಾ.ಶುಭ ಮರವಂತೆಯವರು ಎನ್.ಎಸ್.ಎಸ್. ಹೇಗೆ ವಿದ್ಯಾರ್ಥಿಗಳಲ್ಲಿ ಉತ್ಸಾಹ ಜ್ಞಾನ, ಸೇವಾ ಮನೋಭಾವ ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂಬುದರ ಮಹತ್ವವನ್ನು ತಿಳಿಸಿದರು. ಎನ್.ಎಸ್.ಎಸ್. ಎನ್ನುವುದು ಕೇವಲ ಕಾಲೇಜಿನ ಆವರಣಕ್ಕೆ ಸೀಮಿತಗೊಳ್ಳದೆ ಹಳ್ಳಿ ಹಳ್ಳಿಗಳಿಗೂ ಸಮುದಾಯಗಳಿಗೂ ವಿಸ್ತಾರಗೊಂಡು ಸಮಾಜದ ಅಭಿವೃದ್ಧಿಗೆ ಕಾರಣವಾಗಿದೆ. ಎನ್.ಎಸ್.ಎಸ್. ಕಾರ್ಯಕ್ರಮಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಯುವಕರು ಹಲವಾರು ಬದಲಾವಣೆಗಳನ್ನು ತಂದಿದ್ದಾರೆ. ಜೊತೆಗೆ ಯುವ ನಾಯಕರು ಹೊರಹೊಮ್ಮಿದ್ದಾರೆ. ಗಾಂಧಿ ಮತ್ತು ಸ್ವಾಮಿ ವಿವೇಕಾನಂದ ಅವರನ್ನು ಉಲ್ಲೇಖಿಸಿದ ಮರವಂತೆಯವರು ವಿದ್ಯಾರ್ಥಿಗಳಿಗೆ ಕಲ್ಲಿನಂತೆ ಸ್ತಭ್ಧವಾಗಿರಬೇಡ, ಗಡಿಯಾರದಂತೆ ನಿರಂತರವಾಗಿ ಚಟುವಟಿಕೆಯಿಂದ ಇರಬೇಕು ಎಂದು ಕರೆಕೊಟ್ಟರು. ನಮ್ಮ ಸುತ್ತಲಿನ ವ್ಯಕ್ತಿಗಳನ್ನು ಬರಿ ಹಣದಿಂದ ಮಾತ್ರ ಅಳೆಯದೆ ಹೃದಯದಿಂದ ಅನುಕಂಪದಿಂದ ಅಳೆಯಬೇಕು ಎಂದು ತಿಳಿಸಿದರು. ಉತ್ತಮ ನಾಯಕನಾದವನು ಶತ್ರುವನ್ನು ಮಿತ್ರನಾಗಿ ಬದಲಾಯಿಸಿಕೊಳ್ಳುವ ಗುಣ ಹೊಂದಿರುತ್ತಾನೆ. ಅದು ಗಾಂಧೀಜಿಯವರಲ್ಲಿತ್ತು. ನಾಯಕರು ತಾವು ಕಾರ್ಯೋನ್ಮುಖರಾಗಿ ತಮ್ಮ ತಂಡವನ್ನು ಮುನ್ನಡೆಸುತ್ತಾರೆ ಎಂದರು. ೨೦೪೭ರ ಹೊತ್ತಿಗೆ ಭಾರತವು ಸಮರ್ಥ ೧೦೦ ಯುವ ನಾಯಕರನ್ನು ರಾಜಕೀಯ ಕ್ಷೇತ್ರದಲ್ಲಿ ನೋಡಬೇಕು. ಆದುದರಿಂದ, ಎನ್.ಎಸ್.ಎಸ್. ನಾಯಕತ್ವ ಗುಣ ಬೆಳೆಸಿ ಆ ೧೦೦ ಜನರನ್ನು ತಯಾರು ಮಾಡಬೇಕಿದೆ ಎಂದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಮೇಡಂರವರು ಡಾ. ಶುಭ ಮರವಂತೆ ಅವರ ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಿಯಿಸುವುದರ ಜೊತೆಗೆ ಕ್ರೀಯಾಶೀಲತೆಯಿಂದ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಕೊಳ್ಳುವುದರಿಂದ ವ್ಯಕ್ತಿತ್ವ ನಿರ್ಮಾಣದ ಸಾಧ್ಯತೆಗಳನ್ನು ವಿವರಿಸಿದರು.  

ಕಾರ್ಯಕ್ರಮವು ಕು. ತನ್ಮಯೀ ಮತ್ತು ಸಂಗಡಿಗರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ವಿದ್ಯಾರ್ಥಿಯಾದ ಹಸೇನ್ ಶುಭ ಮರವಂತೆಯವರನ್ನ ಸಭೆಗೆ ಪರಿಚಯಿಸಿದರು.

ಡಾ. ಸುಕೀರ್ತಿ ಸ್ವಾಗತಿಸಿ, ಶ್ರೀ ಮೋಹನ್ ಕುಮಾರ್ ಆರ್ ರವರು ವಂದಿಸಿದರು. ಕಾರ್ಯಕ್ರಮವನ್ನು ಸ್ವಯಂ ಸೇವಕ ತೇಜಸ್ವಿ, ದ್ವಿತೀಯ ಬಿ.ಎ. ಅವರು ನಿರೂಪಿಸಿದರು ಹಾಗೂ ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.