ಮಾನಸ ಟ್ರಸ್ಟ್, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಶಿವಮೊಗ್ಗ, ಇವರ ವತಿಯಿಂದ ದಿನಾಂಕ ೭/೭/೨೫ ರಂದು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಘಟಕ ಹಾಗೂ ಕಾಲೇಜಿನ ಎಲ್ಲಾ ವೇದಿಕೆಗಳ ಉದ್ಘಾಟನಾ ಕಾರ್ಯಕ್ರಮ ಮತ್ತು ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ ನೆರವೇರಿತು.
ಕಾರ್ಯಕ್ರಮವನ್ನು ಹೊಂಗಿರಣ ಪಿ ಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರೋಹಿತ್ ವಿ ಅವರು ಉದ್ಘಾಟಿಸಿ ಮಾತನಾಡುತ್ತಾ, ಗುಣಮಟ್ಟದ ಶಿಕ್ಷಣ ಇಂದಿನ ಸಮಾಜಕ್ಕೆ ಮತ್ತು ವಿದ್ಯಾರ್ಥಿಗಳಿಗೆ ಅಗತ್ಯವಿದೆ, "ದೇಶ ಕಟ್ಟುವಲ್ಲಿ ಶಿಕ್ಷಣ, ಕಾಲೇಜು ಮತ್ತು ಯುವ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು" ವಿದ್ಯಾರ್ಥಿಗಳಿಗೆ ಇರುವ ಉತ್ಸಾಹಕ್ಕೆ ನೀರೆರೆದು ಪೋಷಿಸಿ ಸರಿಯಾದ ಮಾರ್ಗದರ್ಶನ ನೀಡುವ ಪೋಷಕರು, ಮಾರ್ಗದರ್ಶಕರು, ಶಿಕ್ಷಣ ಸಂಸ್ಥೆಗಳ ಅವಶ್ಯಕತೆ ತುಂಬಾ ಇದೆ. ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಸೋಶಿಯಲ್ ಮೀಡಿಯಾಗಳಲ್ಲೇ ಸಮಯ ಕಳೆಯುವುದು ಕಳವಳಕಾರಿಯಾಗಿದೆ. ವಿದ್ಯಾರ್ಥಿಗಳು ವಿಜ್ಞಾನಿಗಳ ಮತ್ತೂ ವಿಜ್ಞಾನ ಸಂಸ್ಥೆಗಳ ಒಡನಾಟದಲ್ಲಿ ಇರಬೇಕು. ಮೊಬೈಲ್ ಹಾಗೂ ಇಂಟರ್ನೆಟ್ ಅನ್ನೂ ಸದುಪಯೋಗಪಡಿಸಿಕೊಳ್ಳಬೇಕು. ಇರುವ ಸೌಲಭ್ಯಗಳನ್ನು ಮುಂದಿನ ಜೀವನ ರೂಪಿಸಿಕೊಳ್ಳಲು ಉಪಯೋಗಿಸಿಕೊಳ್ಳಬೇಕು. ಚಾಟ್ ಜಿಪಿಟಿಯಂತಹ ಆಪ್ಗಳಿಂದ ವಿದ್ಯಾರ್ಥಿಗಳ ಕ್ರಿಯಾಶೀಲತೆ ಕ್ಷೀಣಿಸುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಕ್ರಮೇಣ ಸೋಶಿಯಲ್ ಮೀಡಿಯಾದಿಂದ ಸಮಯ ವ್ಯರ್ಥ ಮಾಡುವುದನ್ನು ನಿಲ್ಲಿಸಬೇಕು. ಬೌದ್ಧಿಕ ಸಾಮರ್ಥ್ಯವನ್ನು ಬೆಳೆಸುವ ತಾಂತ್ರಿಕ ಸೌಲಭ್ಯಗಳನ್ನ ಮಾತ್ರ ಯೌಟ್ಯೂಬ್ ಹಾಗೂ ಫೇಸ್ಬುಕ್ ಮತ್ತು ಚಾಟ್ ಜಿಪಿಟಿಗಳಿಂದ ಪಡೆಯಬೇಕು. ಆಗ ಮಾತ್ರ ವಿದ್ಯಾರ್ಥಿಗಳು ನಿಜವಾದ ವಿದ್ಯಾರ್ಜನೆ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಬಿಲ್ ಗೇಟ್ಸ್, ಸತ್ಯ ನಡೆಲ್ಲಾ, ಜಾಕ್ ಮಾ, ಝುಕರ್ಬರ್ಗ, ಅಂಬಾನಿ ಇವರೆಲ್ಲ ಶ್ರಮ ಜೀವಿಗಳು, ಸಾಧನೆ ಮಾಡಿದವರು. ಈ ಎಲ್ಲ ಶ್ರೀಮಂತ ವ್ಯಕ್ತಿಗಳು ಜೀವನದಲ್ಲಿ ಹಲವಾರು ಕಷ್ಟಗಳನ್ನು ಎದುರಿಸಿ ಶ್ರಮ ಪಟ್ಟು ಜೀವನದಲ್ಲಿ ಮುಂದೆ ಬಂದಿದ್ದಾರೆ. ಅವರ ಹಾಗೆ ಆಗಬೇಕಾದರೆ ಶ್ರಮಪಡಬೇಕು. ಜ್ಞಾನದ ಹಿಂದೆ ಹೋಗಬೇಕೆ ಹೊರತು ಮಾರ್ಕ್ಸ್ ಹಿಂದೆ ಹೋಗಬಾರದು. ಅಂತಹ ಜ್ಞಾನವನ್ನು ಕೊಡುವ ವಿದ್ಯಾಸಂಸ್ಥೆಗಳು ಬೇಕು ಎಂದು ಅಭಿಪ್ರಾಯ ಪಟ್ಟರು. ಸ್ಟಾರ್ಟ್ ಅಪ್ಗಳನ್ನು ಮಾಡುವ ಕೌಶಲ್ಯ ಹಾಗೂ ಮಹತ್ವದ ಬಗ್ಗೆ ತಿಳಿಸಿದರು. ಕಲಿಕೆಯು ಮುಂದುವರಿಕೆಯಾಗಬೇಕು, ನಮ್ಮನ್ನು ಹಿಂದಕ್ಕೆ ತಳ್ಳುವಂತೆ ಇರಬಾರದು. ಸಾಕಷ್ಟು ಜ್ಞಾನ ಸಂಪಾದನೆಯ ಕಡೆಗೆ ನಮ್ಮ ಆಸಕ್ತಿ ಬೆಳೆಸಿಕೊಂಡರೆ ಮಾತ್ರ ನಿಜವಾದ ಪದವಿ ಪಡೆದಂತೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿಯವರು ಮಾತನಾಡಿ ಉದ್ಯೋಗಕ್ಕೆ ಬೇಕಾಗುವ ವ್ಯಕ್ತಿತ್ವವನ್ನು ಹೇಗೆ ಅಭಿವೃದ್ಧಿ ಪಡಿಸಿಕೊಳ್ಳಬೇಕು, ಅದಕ್ಕೆ ೩ ವರ್ಷದ ಪದವಿಯಲ್ಲಿ ವಿದ್ಯಾರ್ಥಿಗಳು ಹೇಗೆ ಕೌಶಲ್ಯಗಳನ್ನು ಹೊಂದಲು ಪ್ರತಿಯೊಂದು ವೇದಿಕೆ ಹಾಗೂ ಘಟಕಗಳು ಹೇಗೆ ಸಹಾಯಕವಾಗಿದೆ ಎಂಬುದನ್ನು ತಿಳಿಸಿದರು. ಕಾಲೇಜಿನ ಎನ್ಎಸ್ಎಸ್ ವೇದಿಕೆಯ ಸಾಧನೆಯನ್ನು ಪ್ರಸ್ತುತ ಪಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಎನ್ಎಸ್ಎಸ್ ಘಟಕಗಳ ಮಹತ್ವವನ್ನು ತಿಳಿಸಿದರು. ಕಾಲೇಜಿನ ಅನ್ವೇಷಣಾ, ಸಾಹಿತ್ಯ ಸಹೃದಯ, ಬೆಳ್ಳಿಸಾಕ್ಷಿ ಕಲ್ಪನಾ ಹಾಗೂ ಇತರ ವೇದಿಕೆಗಳ ಸಂಕ್ಷಿಪ್ತ ಪರಿಚಯ ಮಾಡಿಕೊಟ್ಟರು.
ಶೈಕ್ಷಣಿಕ ಆಡಳಿತಾಧಿಕಾರಿಗಳಾದ ಪ್ರೋ. ರಾಮಚಂದ್ರ ಬಾಳಿಗ ವಿದ್ಯಾರ್ಥಿಗಳನ್ನು ಮತ್ತೊಮ್ಮೆ ಸ್ವಾಗತಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಲಾಂಗ್ ಟರ್ಮ್ ಗೋಲ್ ಬಗ್ಗೆ MSDC SKILL ಡೆವಲಪ್ಮೆಂಟ್ ಕೋರ್ಸ್ಗಳ ಬಗ್ಗೆ ಮಹತ್ವವನ್ನು ತಿಳಿಸಿ ಕಾಲೇಜು ಘಟಕಗಳ ಪ್ರಾಮುಖ್ಯತೆ ತಿಳಿಸಿ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.
ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಪಕರಾದ ಕುಮಾರಿ ಯೋಶಿತ ಸೊನಲೆ ಅವರು ಅತಿಥಿಗಳನ್ನು ಪರಿಚಯಿಸಿದರು.
ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಪಕರಾದ ಶ್ರೀ ಮಂಜುನಾಥ್ ಸ್ವಾಮಿ ಅವರು ಪ್ರಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಮೋಹನ್ ಕುಮಾರ್ ಅವರು ವಂದಿಸಿದರು. ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ನಾನ್ಸಿ ಲವೀನಾ ಪಿಂಟೋ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಹಾಗೂ ಐ ಕ್ಯೂ ಎ ಸಿ ಸಂಯೋಜಕರಾದ ಡಾ. ಅರ್ಚನಾ ಭಟ್ ಉಪಸ್ಥಿತರಿದ್ದರು.